ಮಹಾಭಾರತದಲ್ಲಿ ಭೀಷ್ಮನ ಕಥೆ ಯಾರಿಗೆ ತಿಳಿದಿಲ್ಲ? ಒಂದು ಬಗೆಯಲ್ಲಿ ಮಹಾಭಾರತದ ಕಥಾನಾಯಕ ಇವನೇ ಆದಿಯಿಂದ ಅಂತ್ಯದವರೆಗೆ ವಿಜ್ರಂಭಿಸುವ ವ್ಯಕ್ತಿತ್ವ. ತನಗಾಗಿ ಎನೂ ಮಾಡದೆ ಚಂದ್ರವಂಶದ ಸಕಲ ಉತ್ಕರ್ಷಕ್ಜೂ ಚಿಂತಿಸುತ್ತಾ ಬಹು ದೀರ್ಘ ಜೀವನವನ್ನು ಅದಕ್ಕಾಗಿ ಮೀಸಲಿಡುತ್ತಾನೆ. ಬಲು ದೀರ್ಘವಾದ ಜೀವನ ಯಾನ ಆತನಿಗೆ ಸದಾಪರೀಕ್ಷೆಯನ್ನು ತಂದರೂ ತನ್ನದೇ ಆದ ತಾತ್ವಿಕ ಹಾದಿಯನ್ನೇ ನಂಬಿ ಅದಲ್ಲದೇ ಬೇರೆ ಏನೂ ಇಲ್ಲ ಎಂಬಂತೆ ಬದುಕುತ್ತಾನೆ. ಬದುಕು ಆತನಿಗೆ ವಾಸ್ತವದ ಸತ್ಯ ಪರೀಕ್ಷೆಯನ್ನು ಒಡ್ಡಿದರೆ ಈತ ಅಚಲನಾದ. ಯಾರಿಗಾಗಿ ದುಡಿದ? ಯಾಕಾಗಿ ದುಡಿದ? ಅದರಲ್ಲಿ ಏನು ಪಡೆದ? ತನ್ನದು ಎಂಬ ವ್ಯಕ್ತಿತ್ವ, ಯಾರೂ ಅಳೆಯಲಾಗದ ಅಖಂಡ ವ್ಯಕ್ತಿತ್ವ. ತನ್ನವರಿಂದಲೇ ಟೀಕೆಗಳು ಎದುರಾದರೂ ಅದು ಸ್ತುತಿವಾಚಕದಂತೆ ಸ್ವೀಕರಿಸಿದ. ಬದುಕು ಆತನಿಗೆ ಕಲಿಸಿದಷ್ಟೂ ಬದುಕಿಗೆ ಆತ ಕಲಿಸಿದ. ಹೊಗಳುವವರನ್ನು ಹತ್ತಿರ ಕರೆಯಲಿಲ್ಲ. ಆಕ್ಷೇಪಿಸುವವರನ್ನು ದೂರ ತಳ್ಳಲಿಲ್ಲ. ಒಂದು ಅರ್ಥದಲ್ಲಿ ಸ್ಥಿತಪ್ರಜ್ಜತೆ. ಹಾಭಾರತವನ್ನು ಸಮಗ್ರ ಅವಲೋಕನಮಾಡಿದರೆ ಭೀಷ್ಮದೈತ್ಯಾಕಾರದಲ್ಲಿ ಭೀಷ್ಮನಾಗಿ ಮರೆದ.
ಯಕ್ಷಗಾನದಲ್ಲಿ ಹಿರಿಯ ಅಜ್ಜ ಬಲಿಪರು ಭೀಷ್ಮನ ವ್ಯಕ್ತಿತ್ವ ತೋರಿದರೂ ಭೀಷ್ಮನಾಗಿ ಮರೆದದ್ದು ಮಾತ್ರ ಕಿರಿಯ ಬಲಿಪ್ಪರು. ಭಾರತದ ಭೀಷ್ಮರಂತೆ ಯಾರನ್ನೂ ಹತ್ತಿರಕ್ಕೆ ಕರೆಯದ ಯಾರನ್ನೂ ದೂರಕ್ಕೆ ತಳ್ಳದ ಬಲಿಪ್ಪರ ಸ್ಥಿತ ಪ್ರಜ್ಞೆ, ಅದು ಅವರಿಗೆ ಮಾತ್ರವೇ ಸಲ್ಲುವ ನಿಲುವಾಗಿತ್ತು. ಅಜ್ನನೂ ಭೀಷ್ಮ ಮೊಮ್ಮಗನೂ ಭೀಷ್ಮ. ಒಂದರ್ಥದಲ್ಲಿ ಭಾಗವತ ವಂಶವೇ ಬೀಷ್ಮ ಸಾಕ್ಷಾತ್ಕಾರಕ್ಕೆ ಕಟಿ ಬದ್ದವಾದಂತೆ. ಯಕ್ಷಗಾನಕ್ಕೆ ಅನಿವಾರ್ಯವಾದ ಭೀಷ್ಮ ಪದವಿ.
ಬಲಿಪ ನಾರಾಯಣ ಭಾಗವತರು...ಈ ಹೆಸರು ಎರಡೂ ಪೀಳಿಗೆಗೆ ಸಾಮ್ಯತೆಯಲ್ಲಿ ಯಾಕೆ ಒದಗಿಬಂತು ಎಂಬುದೇ ಅಚ್ಚರಿ. ಅಜ್ಜ ಎಳೆದ ಯಕ್ಷಗಾನ ಪರಂಪರೆಯ ಆ ರೇಖೆ ಮೊಮ್ಮಗನ ತನಕವೂ ಬಂದು ರೇಖೆ ಮತ್ತೂಬೆಳೆದು ಲಂಬಿಸಿತು. ಈ ರೇಖೆಯೇ ಯಕ್ಷಗಾನದ ಬೆನ್ನೆಲುಬಾಗಿ ಬೆಳೆದದ್ದು ಇತಿಹಾಸ. ನಮ್ಮ ಹಿರಿಯರು ಯಕ್ಷಗಾನವನ್ನು ಅಜ್ಜ ಬಲಿಪರಿಂದ ಕಂಡರೆ ನಾವು ಕಿರಿಯ ಬಲಿಪರಿಂದ ಕಂಡೆವು. ಅಷ್ಟಕ್ಕೇ ನಿಲ್ಲದೆ ಅದು ಇಂದಿನ ತಲೆಮಾರಿನವರೆಗೂ ಮುಂದುವರಿದು, ಇದೀಗ ಕೊನೆಗೊಂಡಿತು. ವ್ಯವಹಾರದಲ್ಲಿ ಹಾಕಿದ ಬಂಡವಾಳ ಪುನಹ ಕೈ ಸೇರುವುದಿಲ್ಲ . ಕೇವಲ ಲಾಭ ಮಾತ್ರ ಕೈ ಸೇರಬಹುದು. ಬಂಡವಾಳ ಕೈ ಸೇರಿದರೆ ವ್ಯವಹಾರ ನಿಂತಂತೆ. ಲಾಭದ ನಿರೀಕ್ಷೆ ಮಾತ್ರ ಇರಬೇಕು. ಭರವಸೆ ಕಲ್ಪಿಸುವಂತಿಲ್ಲ. ವ್ಯವಹಾರ ಎಂದಾಗ ಇದೆಲ್ಲ ಸಾಮಾನ್ಯ. ಯಕ್ಷಗಾನದಲ್ಲಿ ಹಾಕಿದ ಬಂಡವಾಳ ಹಿಂದೆ ತೆಗೆಯುವಂತಹ ಒಂದು ಸಂಕ್ರಮಣ ಸ್ಥಿತಿ. ಆದರೆ ಬಲಿಪ್ಪರು ಹಾಕಿದ ಭಂಡವಾಳ ಅದು ಇಂದಿಗೂ ಸ್ಥಿರವಾಗಿ ಇದೆ. ಅದು ವ್ಯವಹಾರಕ್ಕೆ ಬಳಸಿಕೊಳ್ಳುವಲ್ಲಿ ಯಕ್ಷಗಾನದ ಅಳಿವು ಉಳಿವು ನಿರ್ಧರಿಸಿದೆ. ಯಾಕೆಂದರೆ ಬಲಿಪ್ಪರು ತುಳಿದ ಹಾದಿ ಅದು ಯಕ್ಷಗಾನದ ಹಾದಿ. ಆ ಹಾದಿ ಯಕ್ಷಗಾನ್ದ ಪರಂಪರೆಯ ಹಾದಿ.
ಮಹಾಭಾರತದಲ್ಲಿ ಎಲ್ಲವೂ ಮುಗಿದ ಮೇಲೆ. ಧರ್ಮರಾಯ ಭೀಷ್ಮರ ಬಳಿಗೆ ಬರುತ್ತಾನೆ. ಭೀಷ್ಮರು ಯಾರು ಕೊಡದೆ ಇದ್ದ ಉಪದೇಶಗಳನ್ನು ಪಡೆಯುತ್ತಾನೆ. ಆದರೆ ಯಕ್ಷಗಾನದಲ್ಲಿ ಅದು ಎಷ್ಟು ಮಟ್ಟಿಗೆ ಸಂಭವಿಸಿದೆ ಎಂದರೆ ಆತಂಕವಾಗುತ್ತದೆ. ಕೊನೆಯ ತನಕವು ಯಕ್ಷಭೀಷ್ಮನಿಗೆ ಇದ್ದ ಚಿಂತೆ ಅದೊಂದೆ. ತನ್ನ ಮಗ ಇನ್ನಿಲ್ಲ ಎಂದಾಗ ಅವರು ಹೇಳಿಕೊಂಡ ಮನದಾಳದ ಮಾತು, " ನನಗೆ ಗೊತ್ತಿರುವುದೆಲ್ಲಾ ಅವನಿಗೆ ಗೊತ್ತುಂಟು. ಆದರೆ ಈಗ ಅವನೇ ಇಲ್ಲ......" ಅವರ ಯಕ್ಷಗಾನದ ಕಾಳಜಿಗೆ ಸಾಕ್ಷ್ಯವನ್ನು ನೀಡುತ್ತದೆ. ಯಕ್ಷಗಾನದಲ್ಲಿ ಯುಧಿಷ್ಠಿರನ ಸ್ಥಾನ ಇನ್ನು ಬರಿದಾಗಿಯೇ ಇದೆ ಎಂದು ಹಲವರ ಅನಿಸಿಕೆ. ಸಾಮಾನ್ಯವಾಗಿ ಶ್ರೇಷ್ಠವ್ಯಕ್ತಿಗಳು ಗತಿಸಿ ಹೋದಾಗ ಹೇಳುವ ಸಾಮಾನ್ಯ ಮತೊಂದು ಉಂಟು....ತುಂಬಲಾರದ ನಷ್ಟ. ಹಲವು ಸಲ ಇದರ ಅಂತರಾರ್ಥ ಏನೇ ಆಗಿರಲಿ, ಬಲಿಪ್ಪರ ಅಗಲಿಕೆ ಈ ಮಾತಿಗೆ ಅತ್ಯಂತ ಹೆಚ್ಚು ಪುಷ್ಟಿಯನ್ನು ಕೊಡುತ್ತದೆ. ಯಾಕೆಂದರೆ ಅವರು ಬದುಕಿದ ಬದುಕು, ಸವೆಸಿದ ಹಾದಿ ಮಾಡಿದ ಸಾಧನೆ ಇದಕ್ಕೆ ಕಾರಣ. ಅವರು ಬದುಕಿದಾಗ ಬದುಕಿನ ಬಗ್ಗೆ ಯೊಚಿಸಲಿಲ್ಲ. ಸವೆಸಿದ ಹಾದಿಯಲ್ಲಿ ಹಿಂದೆ ತಿರುಗಿ ನೋಡಲಿಲ್ಲ. ಸಾಧಿಸಿದಾಗ ಆ ಸಾಧನೆಯನ್ನು ಲೆಕ್ಕ ಹಾಕಲಿಲ್ಲ. ಇದೆಲ್ಲವನ್ನು ಪರಿಪೂರ್ಣವಾಗಿ ನೋಡಿದ ಪ್ರೇಕ್ಷಕನೂ ಇಲ್ಲ ಎಂಬುದು ದೌರ್ಭಾಗ್ಯ.
ಬಲಿಪ್ಪರಿಗೆ ಏನೆಲ್ಲ ಗೊತ್ತುಂಟು? ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭ ಇಲ್ಲ. ಅದನ್ನು ಅವುಗಳನ್ನು ಅವಲೋಕಿಸಿದರೆ ಅಚ್ಚರಿಯಾಗುತ್ತದೆ. ಇಂತಹ ಪ್ರಯತ್ನ ನಡೆದಾಗಲೆಲ್ಲ ಅದ್ಭುತವನ್ನೇ ತೆರೆದಿಡುವುದು ಬಲಿಪ್ಪರ ಜ್ಞಾನ ಸಂಪತ್ತು ಹೇಳುತ್ತದೆ. ಅವರು ಎಂದಿಗೂ ತನಗೆ ಗೊತ್ತುಂಟು ಎಂದು ತೋರಿಸಿದವರಲ್ಲ. ಆದರೆ ಯಕ್ಷಗಾನ ಅದನ್ನು ತೋರಿಸುತ್ತಾ ಸಾಗಿತು.ಒಂದಿಷ್ಟು ತಿಳಿದರೆ ಬ್ರಹ್ಮಾಂಡವನ್ನೇ ತಿಳಿದವರಂತೆ ವರ್ತಿಸುವವರು ಇರುವಾಗ ಬಲಿಪ್ಪರ ಜ್ಞಾನ ಸದಾ ಎಲೆಯ ಮರೆಯಲ್ಲೇ ಹುದುಗಿರುತ್ತಿತ್ತು. ಯಕ್ಷಗಾನದಲ್ಲಿ ಅದು ಬಹಿರಂಗವಾದರೂ ಆದರೆ ಅದು ಪರಿಪೂರ್ಣ ಎಂದು ಅನಿಸುವುದಿಲ್ಲ. ಯಾಕೆಂದರೆ ಅವರಿಗೆ ಗೊತ್ತಿರುವುದು ಏನು ಎಂದು ಅವರಿಗೆ ಮಾತ್ರ ಗೊತ್ತು. ತಿಳಿಯುವವರ ಉತ್ಸಾಹಕ್ಕೆ ಅದು ಸದಾ ಸವಾಲಾಗಿಯೆ ಎದುರು ನಿಲ್ಲುತ್ತಿತ್ತು. ಹಾಗಾಗಿ ಇಂದು ಮಹಾಭಾರತದ ಯುಧಿಷ್ಠಿರ ಯಾರು ಎಂದರೆ ಉತ್ತರಿಸುವುದಕ್ಕೆ ತಡಕಾಡಬೇಕಾಗುತ್ತದೆ. ತುಂಬಲಾರದ ನಷ್ಟ ಎಂದು ಹೇಳುವುದು ಸುಲಭ, ವಿಚಿತ್ರವೆಂದರೆ ನಷ್ಟದ ಅಂದಾಜು ಲೆಕ್ಕ ಹಾಕುವುದಕ್ಕೂ ಸಾಧ್ಯವಿಲ್ಲ ಅಷ್ಟನ್ನೂ ಕಳೆದುಕೊಂಡು ಬಿಟ್ಟಾಗಿದೆ. ಮೊದಲೇ ಎಲ್ಲವನ್ನು ಕಳೆದುಕೊಂಡ ಯಕ್ಷಗಾನ ಇಂದು ಅಕ್ಷರಶಃ ಎಲ್ಲವನ್ನೂ ಕಳೆದುಕೊಂಡಿದೆ ಎನ್ನುವಾಗ ವಿಷಾದ ಆವರಿಸುತ್ತದೆ.
ಬಲಿಪ್ಪರ ಜತೆಗಿನ ನೆನಪುಗಳು ಇಂದು ಅವರು ಇಲ್ಲ ಎನ್ನುವುದನ್ನು ನಂಬುವುದಕ್ಕೆ ಅಸಾಧ್ಯವೆನಿಸುವಂತ ಪ್ರಭಾವವನ್ನು ಮನಸ್ಸಿನಲ್ಲಿ ಉಂಟು ಮಾಡಿದೆ. ಹಾಗಾಗಿ ಮನಸ್ಸು ತುಡಿಯುತ್ತಾ ಇತ್ತು ಒಂದು ಸಲ ಹೋಗಿಬಿಡೋಣ ಎಂದು. ಆ ನೆನಪುಗಳು ನೆನಪುಗಳಾಗಿಯೇ ಇರಲಿ...ಬಲಿಪ್ಪರು ನಮ್ಮೊಂದಿಗೆ ಇದ್ದಾರೆ ಎಂಬ ವಿಶ್ವಾಸವನ್ನು ಅದು ತುಂಬಿಸುತ್ತದೆ. ಹೋದರೂ ಅಲ್ಲಿನ ನೆನಪುಗಳು ಇನ್ನಷ್ಟು ಕಾಡುವುದಕ್ಕಾರಂಭಿಸುತ್ತವೆ. ಅಗಲಿದ್ದಾರೆ ಎಂದು ತಿಳಿಯುವುದಕ್ಕಿಂತ ಇದ್ದಾರೆ ಎಂದು ನಂಬುವುದೇ ಹಿತವಾಗುತ್ತದೆ.
ಯಕ್ಷಗಾನ, ಬಾಲ್ಯದಲ್ಲಿ ಬೆರಗು ಕಣ್ಣುಗಳಿಂದ ನೋಡುತ್ತಿದ್ದೆ. ಆಗೆಲ್ಲ ಈಗಿನಂತೆ ರಂಗ ಪಾರದರ್ಶಕವಾಗಿರಲಿಲ್ಲ. ರಂಗದಲ್ಲಿ ಏನು ಕಾಣುತ್ತಿದ್ದೆವೋ ಅದು ನಿಜವೇನೋ ಎಂಬ ಮುಗ್ಧತೆ. ಅಥವಾ ಅದು ಹೆಚ್ಚು ಮನಸ್ಸಿಗೆ ಪ್ರಭಾವ ಬೀರುತ್ತಿತ್ತು. ಆ ಸಮಯದಲ್ಲೇ ಬಲಿಪ್ಪರು ಯಕ್ಷಗಾನದ ಭಾಗವತರಾಗಿರುವುದನ್ನು ರಂಗದಲ್ಲಿ ಕಂಡಿದ್ದೆ. ಮಂಗಳೂರಿನ ದೇರೇಬೈಲಿನ ನಮ್ಮ ಮನೆ ಆಸು ಪಾಸಿನಲ್ಲಿ ಕಟೀಲು ಮೇಳದ ಆಟವಾದರೆ ಹಗಲು ಅವರು ನಮ್ಮ ಮನೆಗೆ ವಿಶ್ರಾಂತಿಗೆ ಬರುತ್ತಿದ್ದರು. ಜತೆಯಲ್ಲಿ ಯಾರದರೊಬ್ಬ ಪುಟ್ಟ ಕಲಾವಿದರು ಇರುತ್ತಿದ್ದರು. ಬಲಿಪ್ಪರು ಹೆಚ್ಚು ಮಾತನಾಡುತ್ತಿರಲಿಲ್ಲ. ನಮ್ಮ ಹಿರಿಯರಲ್ಲಿ ತುಸು ಮಾತನಾಡುತ್ತಿದ್ದರು. ಅವರ ತಾಂಬೂಲ ಪೆಟ್ಟಿಗೆ ನಮಗಂತೂ ಸೋಜಿಗದ ವಿಷಯವಾಗಿತ್ತು. ಸಾಯಂಕಾಲ ಅದಕ್ಕೆ ಅಡಿಕೆ ಹೋಳು ಮಾಡಿ ಪೆಟ್ಟಿಗೆ ತುಂಬ ತುಂಬಿಸುತ್ತಿದ್ದರು. ಆ ಪುಟ್ಟ ಪೆಟ್ಟಿಗೆಯಲ್ಲಿ ಅದಕ್ಕೆ ಅಂತ ಒಂದು ಭಾಗ ಇರುತ್ತಿತ್ತು. ಆ ಸಮಯದಲ್ಲೇ ಯಕ್ಷಗಾನ ಎಂದರೆ ಬಲಿಪ್ಪರು ಬಲಿಪ್ಪರು ಎಂದರೆ ಯಕ್ಷಗಾನ ಇದು ಅಚ್ಚೊತ್ತಿ ಈಗಲೂ ಅದೇ ಭಾವ. ಬಲಿಪ್ಪರು ಎಲ್ಲಿರುತ್ತಾರೋ ಅಲ್ಲೊಂದು ಯಕ್ಷಗಾನದ ಕಂಪನ್ನು ಕಾಣುತ್ತಿದ್ದೆ.
ನೋಡು ನೋಡುತ್ತಿದ್ದಂತೆ ಯಕ್ಷಗಾನದಲ್ಲಿ ಹಲವು ಬದಲಾವಣೆಗೆಗಳು ಉಂಟಾಯಿತು. ಹಲವಾರು ಭಾಗವತರು ಬಂದರು. ಎಲ್ಲವೂ ಇಷ್ಟವಾದರೂ ಬಲಿಪ್ಪಜ್ಜನ ಪದ ಕೇಳುವಾಗ ಅದು ನೈಜ ಯಕ್ಷಗಾನ ಎಂಬಂತೆ ಭಾಸವಾಗತೊಡಗಿತ್ತು. ಅದೊಂದು ಕಾಲವಿತ್ತು. ಯಕ್ಷಗಾನದಲ್ಲಿ ಶ್ರೀ ಕಾಳಿಂಗ ನಾವುಡರ ಯುಗ. ಬಹುಶಃ ಯಕ್ಷಗಾನದಲ್ಲಿ ಅತ್ಯಂತ ದೊಡ್ಡ ಕ್ರಾಂತಿ. ಎಲ್ಲಿ ನೋಡಿದರೂ ಅದೇ ಧ್ವನಿ ಅಬ್ಬರಿಸುತ್ತಿತ್ತು. ಎಲ್ಲರೂ ಬದಲಾದರು ಬಲಿಪ್ಪರು ಮಾತ್ರ ಬದಲಾಗಲಿಲ್ಲ. ಪರಂಪರೆಯ ಯಕ್ಷಗಾನ ಅವರನ್ನು ಬಿಟ್ಟಿಲ್ಲವೋ ಇಲ್ಲ ಅವರು ಯಕ್ಷಗಾನವನ್ನು ಬಿಡದೆ ಕುಳಿತರೋ ಅಂತೂ ನಿಜವಾದ ಪರಂಪರೆ ಅಲ್ಲಿ ಉಳಿದು ಬಿಟ್ಟಿತು. ಪ್ರವಾಹ ಬಂದು ಊರಿನ ಗುಡಿ ಮುಳುಗಿಯೇ ಬಿಟ್ಟಿತು ಎನ್ನುವಾಗ ಪ್ರವಾಹದಲ್ಲಿ ಕೊಚ್ಚಿ ಹೋಗದೇ ಆ ಗುಡಿ ಮತ್ತೆ ಹೊರಜಗತ್ತನ್ನು ನೋಡುವಂತೆ ಬಲಿಪ್ಪರ ಕಂಠ ಮೊಳಗಾತೊಡಗಿತು. ದಶಕಗಳು ಕಳೆದರು ಬದಲಾಗದ ಮಾಸದ ಪರಂಪರೆಯ ಆವಶ್ಯಕತೆ ಯಕ್ಷಗಾನದಲ್ಲಿ ಕಂಡು ಬಂತು. ಯಕ್ಷಗಾನ ಬದಲಾಯಿತು, ಪ್ರೇಕ್ಷಕ ಬದಲಾದ ಬಲಿಪ್ಪರು ಮಾತ್ರ ಅಚಲವಾಗಿ ನಿಂತುಕೊಂಡಿದ್ದರು. ಅವರು ಪ್ರೇಕ್ಷಕರಿಗಾಗಿ ಹಾಡಲಿಲ್ಲ. ಯಕ್ಷಗಾನಕ್ಕಾಗಿ ಹಾಡಿದರು. ಕೋಗಿಲೆ ಯಾರು ಕೇಳಲಿ ಎಂದು ಹಾಡುವುದಿಲ್ಲ....ಅದು ಸ್ಫೂರ್ತಿಗೊಂಡು ಹಾಡುತ್ತದೆ. ಕೇಳಬೇಕಾದವನು ಮುಂಜಾನೆ ಎದ್ದು ಕಿವಿಗೊಡಬೇಕು. ಆಗಲೂ ಕೋಗಿಲೆ ಕಣ್ಣಿಗೆ ಕಾಣಿಸುವುದಿಲ್ಲ. ಯಕಃಶ್ಚಿತ್ ಬಲಿಪ್ಪರು ಕೋಗಿಲೆಯಂತೆ, ಅವರೆಂದೂ ಎದುರಿಗೆ ಕಾಣಿಸಿಕೊಳ್ಳದ ಅದೃಶ್ಯ ಮೂರ್ತಿಯಾದರು. ಅವಗಣನೆ ಅವರಿಗೆ ಅವಗಣನೆ ಎಂದೆನಿಸಲಿಲ್ಲ. ಪುರಸ್ಕಾರದ ಹಿಂದೆ ಅವರೆಂದೂ ಸರದಿ ನಿಲ್ಲಲಿಲ್ಲ. ದೇವರಿಗೊಬ್ಬರಿಗೆ ಅಥವಾ ಕಲಾ ಸರಸ್ವತಿಗೆ ನಮಸ್ಕರಿಸಿದ್ದು ಬಿಟ್ಟರೆ ಅವರು ಯಾರಿಗೂ ತಲೆಬಾಗಿದ್ದು ನಾನು ನೋಡಲಿಲ್ಲ. ನಿಜ ಅರ್ಥದಲ್ಲಿ ಭಾಗವತರಾಗಿ, ಘನತೆ ಗಾಂಭೀರ್ಯದ ಭಾಗವತ ಭೀಷ್ಮರಾಗಿ ಮೆರೆದು ಬಿಟ್ಟರು.
ಅವರೊಂದಿಗೆ ನನ್ನ ಅದ್ವೀತೀಯ ಅವಸ್ಮರಣೀಯ ಅನುಭವ ಎಂದರೆ ಬೆಂಗಳೂರಿನಲ್ಲಿ ಅವರಿಗೆ ನಾವು ಮಾಡಿದ ಸನ್ಮಾನ. ನಾವು ಮರೆಯುವಂತಿರಲಿಲ್ಲ. ಆದರೆ ಬಲಿಪ್ಪಜ್ಜನೂ ಅದನ್ನು ಮರೆಯಲಿಲ್ಲ. ಏನೂ ತಿಳಿಯದ ನಾವೂ ಕಾರ್ಯಕ್ರಮ ಮಾಡಿದೆವು. ನಾವೂ ದೊಡ್ಡ ಸಾಧನೆ ಮಾಡಿದಂತೆ ಹಿರಿ ಹಿಗ್ಗಿದೆವು. ನಿಜಕ್ಕಾದರೆ ಅದರ ಹಿಂದಿನ ಶಕ್ತಿ ಕೇವಲ ಬಲಿಪ ನಾರಾಯಣ ಭಾಗವತ ಎಂಬ ಹೆಸರು ಮಾತ್ರ. ನಿಜಕ್ಕಾದರೆ ಬೇರೆ ಯಾರ ಕಾರ್ಯಕ್ರಮ ಮಾಡುವುದಕ್ಕಿಂತ ಬಲಿಪ್ಪರ ಕಾರ್ಯಕ್ರಮ ಮಾಡುವುದು ಸುಲಭ. ಸಹಕಲಾವಿದರ ಬಗ್ಗೆ ಯೋಚಿಸಬೇಕಿಲ್ಲ, ಜನ ಸೇರುವ ಆತಂಕವಿಲ್ಲ. ಯಾಕೆಂದರೆ ಬಲಿಪ್ಪಜ್ಜ ಎಂದು ಬದಲಾಗುವುದಿಲ್ಲ. ಅದೇ ಸರಳತೆ, ಅದೇ ಗಾಂಭೀರ್ಯ ಇನ್ನು ಹತ್ತು ಹಲವು ವೈಶಿಷ್ಟ್ಯಗಳು ....ನಮ್ಮ ಶಕ್ತಿಯನ್ನು ಹೆಚ್ಚಿಸುತ್ತವೆ. ಧನ ಸಂಗ್ರಹದಿಂದ ತೊಡಗಿ ಕಾರ್ಯಕ್ರಮ ಏರ್ಪಡಿಸುವ ತನಕವೂ ನಮ್ಮ ಶ್ರಮಕಿಂತಲೂ ಬಲವಾಗಿ ನಿಂತದ್ದು ಆ ನಾಮದ ಶಕ್ತಿ. ಅದೆಂತಹ ವ್ಯಕ್ತಿತ್ವ? ಯಶಸ್ಸಿನ ಕಾರ್ಯಕ್ರಮ ಮುಗಿಸಿ ಅವರನ್ನು ಬೀಳ್ಕೊಟ್ಟ ಇರುಳು ನಾವಂತೂ ಸಂತೋಷದಲ್ಲಿ ನಿದ್ದೆ ಮಾಡಲಿಲ್ಲ. ಆದಿನ ಬಲಿಪ್ಪಜ್ಜನೂ ನಿದ್ದೆ ಮಾಡಲಿಲ್ಲ ಎಂಬುದು ಬಲಿಪ್ಪಜ್ಜ ನಮ್ಮ ಮೇಲಿಟ್ಟ ಪ್ರೀತಿಯ ಸಂಕೇತ. ಅಜ್ಜ ಬಿಟ್ಟು ಹೋದ ನೆನಪುಗಳಲ್ಲಿ ಇದು ಅತ್ಯಂತ ದೊಡ್ಡದು. ಒಂದೆರಡು ಸಲ ಅವರು ನಮ್ಮ ಮನೆಗೆ ಬಂದಿದ್ದರು. ಒಂದೆರಡು ದಿನ ತಂಗಿದ್ದರು. ನಮ್ಮ ಮನೆಯ ಪುಟ್ಟ ಮಕ್ಕಳು ಅವರ ತೊಡೆ ಮೇಲೆ ಏರಿ ಕುಳಿತಿದ್ದವು. ಛೇ ಅದೆಂತಹ ಅಕ್ಕರೆ. ಮನೆಯಲ್ಲಿ ಒಬ್ಬ ಹಿರಿಯಜ್ಜ ಹೀಗಿದ್ದರೆ ಅದೆಷ್ಟು ಸುಂದರ? ಬತ್ತದ ನೆನಪುಗಳು ಹಲವು. ಈಗ ಅದಕ್ಕೆಲ್ಲ ಅಂಕಗಳನ್ನು ಕೊಡುವುದಷ್ಟೆ ಉಳಿದಿದೆ.
ಅಜಾತ ಶತ್ರು, ಸನ್ಮನಸ್ಸು, ಸಹೃದಯತೆ , ಉದಾರ ವ್ಯಕ್ತಿತ್ವ ಹೀಗೆ ಒಬ್ಬ ವ್ಯಕ್ತಿಯ ಉನ್ನತಿಗಳು ಏನೆಲ್ಲ ಇದೆಯೋ ಅದೆಲ್ಲವನ್ನು ಅರಗಿಸಿಕೊಂಡ ಮಹಾ ವ್ಯಕ್ತಿ. ಯಕ್ಷಗಾನ ಬಿಟ್ಟರೆ ಬಲಿಪ್ಪರಿಲ್ಲ. ಆದರೆ ನಾನು ಯಕ್ಷಗಾನವಲ್ಲದೇ ಬಲಿಪ್ಪರಲ್ಲಿ ಸಾಕಷ್ಟು ಕಂಡಿದ್ದೇನೆ. ಹೀಗೆ ಇರಲು ಸಾಧ್ಯವೇ ಅಂತ ಆಶ್ಚರ್ಯಪಟ್ಟಿದ್ದೇನೆ. ಬಲಿಪ್ಪಜ್ಜ ಇನ್ನೂ ಇರಬೇಕಿತ್ತು ಅಂತ ಅನಿಸುತ್ತದೆ. ಆದರೆ ಅದೂ ಅವರಿಗೆ ಒಂದು ಶಿಕ್ಷೆಯಾಗುತ್ತದೆ. ಯಾಕೆಂದರೆ ಮಹಾ ಭಾರತದ ಭೀಷ್ಮನಂತೆ, ಅಂತಿಮದಿನಗಳು ಅತ್ಯಂತ ದುಃಖಕರವಾಗಿ ಕಳೆಯುವಂತಾಯಿತು. ಮೆಚ್ಚಿನ ಮಡದಿ ಅಗಲಿಹೋದರೆ, ತನ್ನ ಸರ್ವಸ್ವವನ್ನು ಧಾರೆ ಎರೆದು ಬೆಳೆಸಿದ ಮಗನನ್ನು ಕಳೆದುಕೊಂಡರು. ಯಕ್ಷಗಾನದ ಭೀಷ್ಮ ಅಂತ ಯಾಕೆ ಕರೆದರೊ, ಭೀಷ್ಮನಂತೆ ಕೊನೆಯಲ್ಲಿ ದುರಂತಮಯ ಕ್ಷಣಗಳು ಎದುರಾದದ್ದು ವಿಪರ್ಯಾಸ.
ಹಲವರು ಹಲವು ರೀತಿಯಲ್ಲಿ ಅವರನ್ನು ಸ್ಮರಿಸಬಹುದು. ಆ ಸ್ಮರಣೆ ಸಾರ್ಥಕವಾಗಬೇಕಾದರೆ, ಅವರು ಉಳಿಸಿ ಕಾಯ್ದಿಟ್ಟ ಪರಂಪರೆ ಯಕ್ಷಗಾನದಲ್ಲಿ ಉಳಿಯಬೇಕು. ಎಷ್ಟು ಸಾಧ್ಯವೋ ಅಷ್ಟು. ಯಾಕೆಂದರೆ ಮೊನ್ನೆ ಮೊನ್ನೆಯ ತನಕವೂ ವಿಜ್ರಂಭಿಸಿದ ಆ ಪರಂಪರೆ ಇಲ್ಲವಾದರೆ ಯಕ್ಷಗಾನದಲ್ಲಿ ಮತ್ತೇನೂ ಉಳಿಯದೆ ಶುಷ್ಕವಾಗಿಬಿಡುತ್ತದೆ. ಯಾವ ಆಧುನೀಕತೆ, ಪರಿಷ್ಕಾರಕ್ಕೆ ಮಾರು ಹೋಗದೇ ಆ ಪರಂಪರೆ ಯಥಾವತ್ ಉಳಿಯುವುಂತಾಗಬೇಕು. ಅದು ಅವರಿಗೆ ಆತ್ಮಾರ್ಥವಾಗಿ ಸಲ್ಲಿಸುವ ಶ್ರಧ್ಧಾಂಜಲಿ.